15/11/2022
Inauguration of SRISTICA (Civil Engineering Students Association) and SATARC (Cyber Security & Cyber Forensics Engineering Students Association) at Mukka, Mangaluru.
ಶ್ರೀನಿವಾಸ್ ಯೂನಿವರ್ಸಿಟಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯಲ್ಲಿ ಸಿವಿಲ್ ಇಂಜಿನಿಯರಿಂಗ್ ಮತ್ತು ಸೈಬರ್ ಸೆಕ್ಯೂರಿಟಿ ಇಂಜಿನಿಯರಿಂಗ್ ವಿದ್ಯಾರ್ಥಿ ಸಂಘಟನೆಗಳ ಉದ್ಘಾಟನೆ.
ಮಂಗಳೂರಿನ ಮುಕ್ಕದಲ್ಲಿರುವ ಶ್ರೀನಿವಾಸ್ ಯೂನಿವರ್ಸಿಟಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯಲ್ಲಿ 2022 -23 ನೇ ಸಾಲಿನ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಸಂಘಟನೆ (ಸೃಷ್ಠಿಕ) ಮತ್ತು ಸೈಬರ್ ಸೆಕ್ಯೂರಿಟಿ ಆಂಡ್ ಸೈಬರ್ ಫಾರೆನ್ಸಿಕ್ಸ್ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಸಂಘಟನೆ (ಸತಾರ್ಕ್) ಉದ್ಘಾಟನಾ ಕಾರ್ಯಕ್ರಮವನ್ನು ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಯಿತು. ಕಾಲೇಜಿನ ಮುಖ್ಯಸ್ಥರಾದ ಡಾ. ಥಾಮಸ್ ಪಿಂಟೋ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಪ್ರಸಿದ್ಧ ಯುವ ಉದ್ಯಮಿ, ಬಿಲ್ಡರ್ ಹಾಗೂ ಉಜ್ವಲ್ ಗ್ರೂಪ್ ಆಫ್ ಕಂಪೆನಿಯ ಆಡಳಿತ ನಿರ್ದೇಶಕರಾದ ಶ್ರೀ ಅಜಯ್ ಪಿ. ಶೆಟ್ಟಿ ಮತ್ತು ಕಾಕುಂಜೆ ಸಾಫ್ಟವೇರ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಸಂಸ್ಥಾಪಕರು ಹಾಗೂ ಆಡಳಿತ ನಿರ್ದೇಶಕರಾದ ಶ್ರೀ ಗೋಪಾಲಕೃಷ್ಣ ಭಟ್ ರವರು ದೀಪವನ್ನು ಬೆಳಗಿಸುವ ಮೂಲಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾಲೇಜಿನ ಅಸೋಸಿಯೇಟ್ ಡೀನ್ ಡಾ. ಶ್ರೀಮತಿ ನೇತ್ರಾವತಿ ಪಿ. ಎಸ್, ಸಿವಿಲ್ ಇಂಜಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ. ರಾಮಕೃಷ್ಣ ಹೆಗಡೆ, ಸೈಬರ್ ಸೆಕ್ಯೂರಿಟಿ ಆಂಡ್ ಸೈಬರ್ ಫಾರೆನ್ಸಿಕ್ಸ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ. ಕೃಷ್ಣ ಪ್ರಸಾದ್ ಕೆ, ಸೃಷ್ಠಿಕ ಸಮನ್ವಯಕಾರರಾದ ಪ್ರೊ. ಕೆ. ಶ್ರೀನಾಥ್ ರಾವ್, ಸತಾರ್ಕ್ ಸಮನ್ವಯಕಾರರಾದ ಪ್ರೊ. ಡ್ಯಾನಿಲಾ ನೀತಾ ಫೆರಾವೊ, ಸೃಷ್ಠಿಕ ಅಧ್ಯಕ್ಷರಾದ ಶ್ರೀ ಎ. ಜಿ. ಗಗನ್ ಮತ್ತು ಸತಾರ್ಕ್ ಅಧ್ಯಕ್ಷರಾದ ಶ್ರೀ ರಕ್ಷಿತ್ ಪ್ರಣವ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಉದ್ಘಾಟನಾ ಭಾಷಣವನ್ನು ಮಾಡಿದ ಮುಖ್ಯ ಅತಿಥಿಗಳಾದ ಶ್ರೀ ಅಜಯ್ ಪಿ. ಶೆಟ್ಟಿ ಯವರು ಮಾತನಾಡಿ ಪ್ರಸಕ್ತ ದೇಶದಲ್ಲಿ ಆಗುತ್ತಿರುವ ರಸ್ತೆ ನಿರ್ಮಾಣ, ಸಾರಿಗೆ, ರೈಲ್ವೆ, ಜಲಮಾರ್ಗ, ವಾಯುಮಾರ್ಗ, ಪ್ರವಾಸೋದ್ಯಮ ಅಭಿವೃದ್ಧಿ, ನಗರಾಭಿವೃದ್ಧಿ, ಸ್ಮಾರ್ಟ್ ಸಿಟಿ, ಕೃಷಿ, ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ, ಸೌರ ಶಕ್ತಿ, ಪ್ರಧಾನಮಂತ್ರಿ ಗತಿ ಶಕ್ತಿ ಯೋಜನೆ, ಭಾರತಮಾಲಾ, ಸಾಗರಮಲಾ ಯೋಜನೆಗಳ ಕುರಿತು ಹಾಗೂ ದೇಶದ ಅಭಿವೃದ್ಧಿಯಲ್ಲಿ ಸಿವಿಲ್ ಇಂಜಿನಿಯರಿಂಗ್ ವೃತ್ತಿಪರರ ಕೊಡುಗೆಯ ಕುರಿತು ಸಮಗ್ರ ಮಾಹಿತಿಯನ್ನು ನೀಡಿದರು. ಭಾರತವು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಹೊರಹೊಮ್ಮುತ್ತಿದೆ ಮತ್ತು 2030 ರಲ್ಲಿ ಜಾಗತಿಕವಾಗಿ ಮೂರನೇ ಸ್ಥಾನವನ್ನು ತಲುಪಲಿದೆ. ಪ್ರಸ್ತುತ ದೇಶ ಮತ್ತು ವಿದೇಶಗಳಲ್ಲಿ ಸಿವಿಲ್ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳು ಇವೆ ಹಾಗೂ ಭವಿಷ್ಯದಲ್ಲಿ ಇನ್ನಷ್ಟು ವಿಫುಲ ಅವಕಾಶಗಳು ಸೃಷ್ಟಿಯಾಗಲಿವೆ ಎಂದು ಶ್ರೀ ಅಜಯ್ ಪಿ. ಶೆಟ್ಟಿ ಯವರು ಹೇಳಿದರು. ಭಾರತದ ಆರ್ಥಿಕತೆಯು ಡೆಮೊಗ್ರಾಪ್ಫಿಕ್ಸ್, ಡಿಜಿಟಲೀಕರಣ, ಡಿಕಾರ್ಬನೈಸೇಶನ್ ಮತ್ತು ಡಿಗ್ಲೋಬಲೈಸೇಶನ್ ಮೇಲೆ ಆಧಾರಿತವಾಗಿದೆ. ಇಂದಿನ ಸಿವಿಲ್ ಇಂಜಿನಿಯರಿಂಗ್ ಪದವೀಧರರು ತಮ್ಮ ಕೌಶಲ್ಯತೆಯನ್ನು ಹೆಚ್ಚಿಸುವುದರ ಜೊತೆಗೆ ಉತ್ತಮ ಸಂವಹನ, ನವೀನತೆ ಮತ್ತು ಸೃಜನಶೀಲತೆಯ ಮೂಲಕ ಉಜ್ವಲ ಭವಿಷ್ಯವನ್ನು ಹೊಂದುವಂತಾಗಲಿ ಎಂದು ಶುಭವನ್ನು ಹಾರೈಸಿದರು.
ಸಮಾರಂಭದ ಮತ್ತೋರ್ವ ಮುಖ್ಯ ಅತಿಥಿಗಳಾದ ಶ್ರೀ ಗೋಪಾಲಕೃಷ್ಣ ಭಟ್ ರವರು ಮಾತನಾಡಿ, ತಮ್ಮ ವಿದ್ಯಾರ್ಥಿ ಜೀವನದ ದಿನಗಳನ್ನು ಮೆಲುಕು ಹಾಕಿದರು. ದೇಶರ ಆರ್ಥಿಕತೆ, ಆರೋಗ್ಯ ಕ್ಷೇತ್ರ, ಕೈಗಾರಿಕೆ, ಕೃಷಿ, ಹಾಗೂ ಇನ್ನಿತರ ಕ್ಷೇತ್ರಗಳು ಮೊಬೈಲ್ ತಂತ್ರಜ್ಞಾನ ಮತ್ತು ಕಂಪ್ಯೂಟರ್ ತಂತ್ರಜ್ಞಾನವನ್ನು ಅವಲಂಬಿಸಿದೆ. ಐಓಟಿ, ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನಗಳು ಎಲ್ಲಾ ಕ್ಷೇತ್ರಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿವೆ. ಈ ತಂತ್ರಜ್ಞಾನವು ಯಶಸ್ಸನ್ನು ಪಡೆಯಬೇಕಾದರೆ ದತ್ತಾಂಶಗಳ ಭದ್ರತೆ ಮತ್ತು ಗೌಪ್ಯತೆ ಅತಿ ಮುಖ್ಯ. ಈ ನಿಟ್ಟಿನಲ್ಲಿ ಬ್ಲೋಕ್ ಚೈನ್ ಮ್ಯಾನೇಜ್ಮೆಂಟ್ ತಂತ್ರಜ್ಞಾನವು ಪ್ರಾಮುಖ್ಯವಾಗಿದೆ. ಸೈಬರ್ ಸೆಕ್ಯುರಿಟಿ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಸೈಬರ್ ಅಪರಾಧಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿಯನ್ನು ಮೂಡಿಸಬೇಕು. ನಮ್ಮ ಸಂಸ್ಥೆಯು ಶ್ರೀನಿವಾಸ್ ವಿಶ್ವವಿದ್ಯಾಲಯದ ಜೊತೆಗೆ ಕೈ ಜೋಡಿಸಿ, ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಬೆಂಬಲ ಮತ್ತು ಸಹಕಾರ ನೀಡಲು ಸಿದ್ಧವಿದೆ ಎಂದು ಹೇಳಿದರು.
ಡಾ. ಪಿ. ಎಸ್. ನೇತ್ರಾವತಿ ಯವರು ಮಾತನಾಡಿ, ಪ್ರಸಕ್ತ ಸನ್ನಿವೇಶದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳ ಅನುಷ್ಠಾನದಲ್ಲಿ ಹಾಗೂ ದೇಶದ ಆರ್ಥಿಕತೆಯಲ್ಲಿ ಸಿವಿಲ್ ಇಂಜಿನಿಯರಿಂಗ್ ಮತ್ತು ಕಂಪ್ಯೂಟರ್ ಇಂಜಿನಿಯರಿಂಗ್ ವೃತ್ತಿಪರರು ಸಮಾನವಾಗಿ ಕಾರ್ಯವನ್ನು ನಿರ್ವಹಿಸುವುದರ ಮೂಲಕ ಉತ್ತಮ ಕೊಡುಗೆಯನ್ನು ನೀಡುತ್ತಿದ್ದಾರೆ. ಸೈಬರ್ ಸೆಕ್ಯುರಿಟಿ ಇಂಜಿನಿಯರಿಂಗ್ ವೃತ್ತಿಪರರು ಸಮಾಜದಲ್ಲಿನ ಅಪರಾಧದ ಪ್ರಮಾಣವನ್ನು ಕಡಿಮೆ ಮಾಡಲು ಉತ್ತಮ ಕೊಡುಗೆಯನ್ನು ನೀಡಬೇಕಾಗಿದೆ. ಭವಿಷ್ಯದಲ್ಲಿ ನಿಮಗೆ ಬಹಳಷ್ಟು ಉತ್ತಮ ಅವಕಾಶಗಳು ಸೃಷ್ಠಿಯಾಗಲಿವೆ. ನಿಮ್ಮ ಕೌಶಲ್ಯಗಳನ್ನು ಅಭಿವೃದ್ಧಿಗೊಳಿಸಿ, ಸ್ಟಾರ್ಟ್ ಅಪ್ ಕಂಪನಿಯನ್ನು ಪ್ರಾರಂಭಿಸುವ ಮೂಲಕ ಹಲವಾರು ಯುವಕರಿಗೆ ಉದ್ಯೋಗಗಳನ್ನು ಸೃಷ್ಠಿ ಮಾಡಿ, ಆ ಮೂಲಕ ಸಮಾಜಕ್ಕೆ ಹಾಗೂ ದೇಶಕ್ಕೆ ಉತ್ತಮ ಕೊಡುಗೆಯನ್ನು ನೀಡುವಂತಾಗಲಿ ಎಂದು ಹೇಳಿ ಶುಭವನ್ನು ಹಾರೈಸಿದರು.
ಅಧ್ಯಕ್ಷೀಯ ಭಾಷಣವನ್ನು ಮಾಡಿದ ಡಾ. ಥಾಮಸ್ ಪಿಂಟೋ ರವರು ಮಾತನಾಡಿ, ಇಂದಿನ ಯುವಜನತೆಯು ಆಧುನಿಕ ತಂತ್ರಜ್ಞಾನ ಮತ್ತು ಪರಿಕಲ್ಪನೆಗಳನ್ನು ಕಲಿತುಕೊಂಡು ಸಮಾಜಕ್ಕೆ ಹಾಗೂ ದೇಶಕ್ಕೆ ಉತ್ತಮ ಕೊಡುಗೆಯನ್ನು ನೀಡಬೇಕು. ತಮ್ಮ ಕಿರು ವಯಸ್ಸಿನಲ್ಲಿ ಬಹಳಷ್ಟು ಸಾಧನೆಯನ್ನು ಮಾಡಿದ ನಮ್ಮ ಇಂದಿನ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಶ್ರೀ ಅಜಯ್ ಪಿ. ಶೆಟ್ಟಿ ಮತ್ತು ಶ್ರೀ ಗೋಪಾಲಕೃಷ್ಣ ಭಟ್ ರವರು ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ ಎಂದು ಹೇಳಿದರು.
ಡಾ. ರಾಮಕೃಷ್ಣ ಹೆಗಡೆ ಯವರು ಸ್ವಾಗತ ಭಾಷಣವನ್ನು ಮಾಡಿದರು ಹಾಗೂ ಸಿವಿಲ್ ಇಂಜಿನಿಯರಿಂಗ್ ಮತ್ತು ಸೈಬರ್ ಸೆಕ್ಯೂರಿಟಿ ಇಂಜಿನಿಯರಿಂಗ್ ವಿದ್ಯಾರ್ಥಿ ಸಂಘಟನೆಗಳ ಚಟುವಟಿಕೆಗಳ ಕುರಿತು ಕಿರುಚಿತ್ರಣವನ್ನು ನೀಡಿದರು.
ಪ್ರೊ. ಕೆ. ಶ್ರೀನಾಥ್ ರಾವ್ ರವರು ಮುಖ್ಯ ಅತಿಥಿ ಶ್ರೀ ಅಜಯ್ ಪಿ. ಶೆಟ್ಟಿ ಯವರನ್ನು ಸಭೆಗೆ ಪರಿಚಯಿಸಿದರು.
ಶ್ರೀ ರಕ್ಷಿತ್ ಪ್ರಣವ್ ರವರು ಮುಖ್ಯ ಅತಿಥಿ ಶ್ರೀ ಗೋಪಾಲಕೃಷ್ಣ ಭಟ್ ರವರನ್ನು ಸಭೆಗೆ ಪರಿಚಯಿಸಿದರು.
ಶ್ರೀ ಎ. ಜಿ. ಗಗನ್ ಮತ್ತು ಶ್ರೀ ರಕ್ಷಿತ್ ಪ್ರಣವ್ ರವರು ವಿದ್ಯಾರ್ಥಿ ಸಂಘಟನೆಗಳ ಚುನಾಯಿತ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
ಕಳೆದ ಶೈಕ್ಷಣಿಕ ವರ್ಷದಲ್ಲಿ ಉತ್ತಮ ಸಾಧನೆಯನ್ನು ಮಾಡಿದ ಪ್ರಥಮ, ದ್ವಿತೀಯ ಮತ್ತು ತೃತೀಯ ವರ್ಷದ ಸಿವಿಲ್ ಇಂಜಿನಿಯರಿಂಗ್ ಮತ್ತು ಸೈಬರ್ ಸೆಕ್ಯೂರಿಟಿ ಆಂಡ್ ಸೈಬರ್ ಫಾರೆನ್ಸಿಕ್ಸ್ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಮುಖ್ಯ ಅತಿಥಿಗಳು ಪ್ರಶಸ್ತಿಪತ್ರ ನೀಡಿ ಪ್ರೋತ್ಸಾಹಿಸಿದರು. ಪ್ರೊ. ಡ್ಯಾನಿಲಾ ನೀತಾ ಫೆರಾವೊ ರವರು ಪ್ರಶಸ್ತಿ ವಿಜೇತರ ವಿವರವನ್ನು ಸಭೆಗೆ ನೀಡಿದರು.
ವಿದ್ಯಾರ್ಥಿನಿ ಕುಮಾರಿ ವೈದೇಹಿ ಮತ್ತು ಕುಮಾರಿ ಮಾಧುರಿ ಪ್ರಾರ್ಥನೆಯನ್ನು ಮಾಡಿದರು.
ಡಾ. ಕೆ. ಕೃಷ್ಣ ಪ್ರಸಾದ್ ರವರು ಧನ್ಯವಾದ ಸಮರ್ಪಣೆಯನ್ನು ಮಾಡಿದರು.
ವಿದ್ಯಾರ್ಥಿನಿ ಕುಮಾರಿ ಐಶ್ವರ್ಯಾ ಬೆಟ್ಟಿನ್ ಮತ್ತು ಕುಮಾರಿ ವೈಷ್ಣವಿ ಶಣೈ ಕಾರ್ಯಕ್ರಮವನ್ನು ನಿರೂಪಿಸಿದರು.
ಇಂಜಿನಿಯರಿಂಗ್ ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವರದಿ: ಪ್ರೊ. ಶ್ರೀನಾಥ್ ರಾವ್ ಕೆ.